Tuesday 6 August 2013

ಕಲಿಗಾಲ

ಪ್ರಪಂಚವೆಂಬ ಸಂತೆಯಲ್ಲಿ
ಲಂಚಕೋರರ ಕಳ್ಳ ಸಂತೆಯಲ್ಲಿ
ಗೋಮುಖ ವ್ಯಾಘ್ರರಂತಿಲ್ಲಿ
ಮುಖವಾಡವ ಧರಿಸಿದರಿಲ್ಲಿ
ಬಾಳುವಿರಿ ಹಾಯಾಗಿ ನೀವಿಲ್ಲಿ :

ನ್ಯಾಯಕ್ಕೆ ಕಾಲವಲ್ಲವಿ ಕಲಿಗಾಲವು
ಅನ್ಯಾಯಕಿಹ ಬೆಲೆ ನ್ಯಾಯಕಿಲ್ಲವು
ಸತ್ಯ ಧರ್ಮ ನ್ಯಾಯಗಳೆಲ್ಲ
ಗೋಮುಖ ವ್ಯಾಘ್ರರ ಕಾಲ ಮೆಟ್ಟುಗಲಾಗಿಹವು

ಅಂದು ಪುಣ್ಯಕೋಟಿ ನುಡಿಯಿತು
ಸತ್ಯವೇ ನಮ್ಮ ತಾಯಿ -ತಂದೆ
ಬಂಧು-ಬಳಗ ಸಕಲವೂ ಎಂದು
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಪರಮಾತ್ಮ ಮೆಚ್ಚನೆಂದು

ಪುಣ್ಯಕೋಟಿಯ ಮಾತು ಕೇಳಿ
ಅದರ ಸತ್ಯ ಸಂಧತೆಗೆ ಮೆಚ್ಚಿ
ಹುಲಿಯೇ ಪ್ರಾಣಾರ್ಪಣೆ ಮಾಡಿಕೊಂಡಿತು
ಆದರಿಂದು ಪುಣ್ಯ ಕೋಟಿ ಯಂಥ
ಸತ್ಯ ಸಂಧರಿಗೆ ಸಿಗುತಿರುವ ಬೆಲೆ ????
ಉಮಾ ಪ್ರಕಾಶ್

ಭೂದೇವಿಗೆ ನನ್ನ ನಮನ     



ಕೋಟಿ ಕೋಟಿ ಜೀವಿಗಳ ಹೊತ್ತು ನಿಂತಿಹ ಭೂದೇವಿಯೇ
ನೀನೇನೋ ಕ್ಷಮಯಾಧರಿತ್ರಿ
ನಿನ್ನ ತಾಳ್ಮೆಗೆ ಸರಿಯಲ್ಲ ಈ ಇಳೆಯು
ಪಾಪಿ ಮನುಜರ ಪಾಪದ ಕೊಡ ತುಂಬಿ ತುಳುಕುತಿದೆ
ನೀನೇನೋ 'ಕ್ಷಮಯಾಧರಿತ್ರಿ' ಎಂದು
ಮಾಡುವುದೇ ಪಾಪವ ಇಷ್ಟೊಂದು?
ತಾವೇನು ಮಾಡುತ್ತಿರುವೆವು ಎಂಬ ಅರಿವು
ಈ ಪಾಪಿ ಮನುಜರಿಗೆ ಇಲ್ಲವು !
ಮೂಕ ಪ್ರಾಣಿಗಳಿಗೆ ಕೊಡುವ ಹಿಂಸೆ ಏನು
ದೀನ ದಲಿತರಿಗೆ ಕೊಡುವ ನೋವೇನು ?
ಮೇಲು ಕೀಳು ಎಂಬ ಭೇದವೇನು?
ನಾನು ತಾನು ಎಂಬ ಅಹಂ ಏನು?
ಅವರ ತಪ್ಪಿಗೆ ಶಿಕ್ಷೆಯೇ ಇಲ್ಲವೇ?
ನೀನೇನೋ ಕ್ಷಮಯಾಧರಿತ್ರಿ ಎಂದು
ಮಾಡುವುದೇ ಪಾಪವ ಇಷ್ಟೊಂದು?
ನಿನ್ನ ತಾಳ್ಮೆಗೆ ಸರಿಯಲ್ಲ ಈ ಇಳೆಯು
ಹೇ ಭೂದೇವಿ ನಿನಗೆ ಇದೋ ನನ್ನ ನಮನ
ಉಮಾ ಪ್ರಕಾಶ್

ಕಲ್ಪನಾ ಲಹರಿ

 


                   ನಾನೊಂದು ಎಣಿಸಿದರೆ ದೈವದೆಣಿಕೆ ಬೇರೆಯೇ ಆಗಿತ್ತು! ! !
ನನ್ನೆಣಿಕೆ ಹೀಗಿತ್ತು .....................!!!
ನಾನೂ ''ನಾಟ್ಯ ರಾಣಿ ಶಾಂತಲೆ'' ಯಂತಾಗಬೇಕು
...ಗೆಜ್ಜೆ ಕಟ್ಟಿ ಕೊಂಡು ನವಿಲಿನಂತೆ ನರ್ತಿಸಿ
ಪ್ರೇಕ್ಷಕರಿಂದ ಬಿರುದು ಬಾವಲಿಗಳನ್ನು ಪಡೆದು
ಅವರ ಹೃನ್ಮನ ಗಳನ್ನೂ ಸೂರೆ ಗೊಳ್ಳಬೇಕು ಎಂದಿದ್ದೆ
ಆದರೆ ನನ್ನೆಣಿಕೆ ಹುಸಿಯಾಯಿತು !


ನಾನೂ ಶ್ರೇಷ್ಠ ಲೇಖಕಿ 'ತ್ರಿವೇಣಿ' ಯವರಂತೆ ಆಗಬೇಕು
ಕಥೆ ಕಾದಂಬರಿ ಗಳನ್ನೂ ರಚಿಸಿ
ಓದುಗರನ್ನು ನನ್ನ ಕಲ್ಪನೆಯ ಕಡಲಲ್ಲಿ ಮುಳುಗಿಸಿ
ಅವರ ಹೃನ್ಮನ ಗಳನ್ನೂ ಸೂರೆ ಗೊಳ್ಳಬೇಕು ಎಂದಿದ್ದೆ
ಆದರೆ ನನ್ನೆಣಿಕೆ ಹುಸಿಯಾಯಿತು !

ನಾನೂ ''ಗಾಯನ ವಿಧೂಷಿ ಎಂ ಎಸ್ ಸುಬ್ಬಲಕ್ಷ್ಮಿ' ಯವರಂತೆ ಆಗಬೇಕು
ನನ್ನ ಇನಿದಾದ ಕಂಠ ದಿಂದ ಹಾಡಿ
ಕೇಳುಗರನ್ನು ನನ್ನ ಸಂಗೀತದ ಸರೋವರದಲ್ಲಿ ತೇಲಿಸಿ
ಅವರ ಹೃನ್ಮನ ಗಳನ್ನೂ ಸೂರೆ ಗೊಳ್ಳಬೇಕು ಎಂದಿದ್ದೆ
ಆದರೆ ನನ್ನೆಣಿಕೆ ಹುಸಿಯಾಯಿತು !
ಉಮಾ ಪ್ರಕಾಶ್