Monday 15 December 2014

ಸುಳ್ಳು ಸುಳ್ಳು ಸುಳ್ಳು ಹಸಿ ಹಸಿ ಸುಳ್ಳು



ಜೀವನದಲ್ಲಿ ಕೆಲವೊಮ್ಮೆ ಸುಳ್ಳು ಹೇಳದೆ ವಿಧಿ ಇಲ್ಲ ಅಂತಹ ಪರಿಸ್ತಿತಿ ಉದ್ಭವ ಆಗುತ್ತೆ  ; ಕಹಿಯಾದ ಸತ್ಯ ಹೇಳುವುದಕ್ಕಿಂತ , ಸಿಹಿ ಯಾದ ಸುಳ್ಳು ಬಹಳ ಹಿತವಾಗಿರುತ್ತೆಯಾರಿಗೂ ಅದರಿಂದ ತೊಂದರೆಯಾಗಲಿ, ಅನಾನುಕೂಲವಾಗಲಿ ಆಗುವುದಿಲ್ಲ.  'ಸತ್ಯಂ ಬ್ರೂಯಾದ್, ಪ್ರಿಯಂ ಬ್ರೂಯಾದ್, ನ ಬ್ರೂಯಾದ್ ಸತ್ಯಂ ಅಪ್ರಿಯಂ' ಅಲ್ಲವೇ ? ಹಾಗಾಗಿ ಕೆಲವೊಮ್ಮೆ ಸತ್ಯ ಹೇಳೋದ್ರಿಂದ ತುಂಬಾ ಅನಾಹುತಗಳು, ಕಹಿ ಘಟನೆಗಳು, ಸಂಬಂಧ ಒಡೆದುಹೋಗುವಂತ ಘಟನೆಗಳು ನಡೆಯುತ್ತವೆ.  ಇಂತಹ ಪ್ರಸಂಗಗಳು ದಿನ ನಿತ್ಯ ಎಲ್ಲರ ಜೀವನದಲ್ಲೂ ನಡೆಯುತ್ತವೆ.  ವೈದ್ಯರು ಕೆಲವೊಮ್ಮೆ, ರೋಗಿಗಳು ಜೀವಂತವಾಗಿರಲು ಅವರ ಆಯಸ್ಸುಕೆಲವೇ ತಿಂಗಳು ಅಥವಾ ಕೆಲವೇ ದಿನಗಳೇ ಆಗಲಿ ಇರುವಾಗ ವೈದ್ಯರು ಅಂತಹ ಸಂಧರ್ಭಗಳಲ್ಲಿ ಸುಳ್ಳು ಹೇಳಲೇ ಬೇಕಾದ ಪರಿಸ್ಥಿತಿ ಉದ್ಭವಿಸುತ್ತದೆ ಹಾಗೂ  ಅನಿವಾರ್ಯವಾಗಬಹುದು. ರೋಗಿಯ ಬಂಧುಗಳಿಗೆ ನಿಜ ಹೇಳಲೇ ಬೇಕಾಗುತ್ತದೆ. ಆದರೆ ರೋಗಿಯ ಹತ್ತಿರ ಇಂತಹ ಕಹಿ ಸುಳ್ಳನ್ನು ಹೇಳಿ ಅವನ ಉಳಿದಿರುವ ಕೆಲವು ದಿವಸಗಳನ್ನು ಜೀವಂತ ನರಕ ಮಾಡುವುದು ಸರಿಯೇ?  ಅವನಿಗೆ ನಿಜಾಂಶ ತಿಳಿಸದೆ ಹೋದರೆ ಅವನು ಇನ್ನು ಸ್ವಲ್ಪ ಹೆಚ್ಚು ದಿನ ಬದುಕುಳಿಯಬಹುದು ಅಥವಾ ಅವನ ಅರೋಗ್ಯ ಸುಧಾರಿಸಿ ಚೇತರಿಸಿ ಕೊಳ್ಳಲೂ ಬಹುದು ! ರೋಗಿಯು ಬದುಕಿರುವನಕ ಅವನನ್ನು ಖುಷಿಯಾಗಿ ಇಟ್ಟು ಕೊಳ್ಳುವುದೇ ವೈದ್ಯರ ಧ್ಯೇಯ ಕೂಡ.  ಸಿಹಿ ಸುಳ್ಳು ನಿಜ ಗೊತ್ತಾದಾಗ ಕಹಿ ಆಗುತ್ತದೆ ..ಮಗ ಫಸ್ಟ್ ಕ್ಲಾಸ್ ಅಂತ ತಂದೆ ತಾಯಿ ಖುಶಿಪಟ್ಟಿರುತ್ತಾರೆ .ನಿಜ ಗೊತ್ತಾದಾಗ ತುಂಬಾ ದುಃಖ ವಾಗುತ್ತದೆ .ಸಂಕಷ್ಟದಲ್ಲಿರುವವರನ್ನು ಪಾರು ಮಾಡಲು ಸುಳ್ಳು ಹೇಳಿದರೆ ಅದು ಒಳ್ಳೆಯ ಕೆಲಸಕ್ಕಾಗಿ .ಸಾವಿರ ಸುಳ್ಳು ಹೇಳಿ ಮದುವೆ ಮಾಡುವುದು ತೊಂದರೆಯೇ ..ವಾಸ್ತವ ಗೊತ್ತಾದಾಗ ಆಗುವ ಅನುಕೂಲಕ್ಕಿಂತ ತೊಂದರೆಯೇ ಹೆಚ್ಚು .ಸುಳ್ಳು ಒಂದು ಆಯುಧವಾದರೆ ಅದನ್ನು ನಮ್ಮ ,ಬೇರೆಯವರ ರಕ್ಷಣೆಗೆ ಬೇಕಾದರೂ ಉಪಯೋಗಿಸಬಹುದು ,ಇಲ್ಲವೇ ತೊಂದರೆ ಕೊಡಲು ,ಹಿಂಸೆ ಮಾಡಲೂ ಉಪಯೋಗಿಸಬಹುದು  ನೋಡಿ ಇದು ' ಒಳ್ಳೆ ಸುಳ್ಳು'  ಅಲ್ಲವೇ ಸ್ನೇಹಿತರೆ ??  ಹಾಗಾಗಿ ನಾನು ಈ ನಿರ್ಧಾರಕ್ಕೆ ಬಂದೆ ''ಕಹಿಯಾದ ಸತ್ಯ ಹೇಳುವುದಕ್ಕಿಂತ , ಸಿಹಿ ಯಾದ ಸುಳ್ಳು ಹೇಳುವುದೇ ಲೇಸು'' ಹಾಗೆ ಯೋಚಿಸುತ್ತ ಈ ಲೇಖನ ಬರೆಯಲು ಸ್ಪೂರ್ತಿ ಬಂತು !!

ಸುಳ್ಳು ಗಳಲ್ಲಿ ಹಲವು ವಿಧ.  ೧) ಶುದ್ದ ಸುಳ್ಳು ೨) ಸಿಹಿ ಸುಳ್ಳು ೩) ಕಹಿ ಸುಳ್ಳು ೪) ಸ0ಕಷ್ಟದಿಂದ ಪಾರು ಮಾಡೋ ಸುಳ್ಳು ೫) ಸಹಾಯ ಮಾಡಲು ಸೃಷ್ಟಿಸುವ ಸುಳ್ಳು ೬) ಸಾವಿರ ಸುಳ್ಳು ಹೇಳಿ 'ಮದುವೆ'  ಮಾಡೋ ಸುಳ್ಳು
೭) ಹುಟ್ಟು ಸುಳ್ಳು ಇತ್ಯಾದಿ ಇತ್ಯಾದಿ ......

೧)  ಶುದ್ದ ಸುಳ್ಳು  ಅಂದ್ರೆ ಅದರಲ್ಲಿ ಒಂದಿಷ್ಟೂ ಸತ್ಯಾಂಶ ಇರುವುದಿಲ್ಲ ; ಅದು 'ಶುದ್ದ ಸುಳ್ಳು'
೨)  ಸಿಹಿ ಸುಳ್ಳು  ಅಂದ್ರೆ ಕೆಲವೊಮ್ಮೆ ನ ಪಾಸಾದ ವಿಧ್ಯಾರ್ಥಿ 'ನಾನು ಫಸ್ಟ್ ಕ್ಲಾಸ್ನಲ್ಲಿ ಪಾಸಾದೆ' ಅಂತ ತನ್ನ ಪೋಷಕರಿಗೆ ಹೇಳಿದಾಗ ಅವರಿಗಾಗುವ ಆನಂದ ಹೇಳತೀರದು ಅಲ್ವೇ ?
೩)  ಕಹಿ ಸುಳ್ಳು  ಅಂದ್ರೆ ನಿಮ್ಮ ಅಜ್ಜಿಗೆ ಸೀರಿಯಸ್ ಅಂತ ಮೆಸೇಜ್ ಕೊಡ್ತಾರೆ , ಆದ್ರೆ ಅಜ್ಜಿ ಶಿವ ಪಾದ ಸೇರಿ ಕೊಂಡು ಗಂಟೆಗಳೇ ಕಳೆದಿರುತ್ತೆ; ಯಾಕೆಂದ್ರೆ ಸಾವಿನ ಸುದ್ದಿ ಇನ್ನೂ ಕಹಿಯಾಗಿರುತ್ತೆ, ಜೀರ್ಣಿಸಿಕೊಳ್ಳಲು ಕಷ್ಟ ಅಲ್ವೇ ?
೪) ಯಾರನ್ನೇ ಅಗಲಿ ಅವರನ್ನು ಸಂಕಷ್ಟ ದಿಂದ ಪಾರು ಮಾಡಲು ಒಂದು ಸುಳ್ಳು ಹೇಳಿದರೆ ಅಡ್ಡಿ ಇಲ್ಲ ಅಲ್ವೇ ? ಒಮ್ಮೆ ಸನ್ಯಾಸಿ ಯೊಬ್ಬ ಧ್ಯಾನದಲ್ಲಿರುವಾಗ ಒಬ್ಬ ಬಡಪಾಯಿ ಪ್ರಾಣ ಭೀತಿ ಇಂದ ಬಂದು ಅವನಲ್ಲಿ ಆಶ್ರಯ ಪಡೆಯುತ್ತಾನೆ , ಆಗ ಒಬ್ಬ ಅವನನ್ನು ಕೊಲ್ಲಲು ಹುಡುಕಿಕೊಂಡು ಬಂದಾಗ ಅವನು ನಮ್ಮ ಆಶ್ರಮದಲ್ಲಿ ಇಲ್ಲ ಎಂದು ಆ ಸನ್ಯಾಸಿ ಸುಳ್ಳು ಹೇಳಿ ಅವನ ಪ್ರಾಣ ಕಾಪಾಡುತ್ತಾನೆ!
೫) ಅದೇ ರೀತಿ ಯಾರಿಗಾದರೂ ಸಹಾಯ ಮಾಡ ಬೇಕಾದಾಗ ಒಂದು ಸುಳ್ಳು ಸೃಷ್ಟಿಸಿ ಅವರಿಗೆ ಸಹಾಯ ಮಾಡುವುದರಲ್ಲಿ ಅರ್ಥ ಇದೆ ಅಲ್ವೇ ?
೬) ಮತ್ತೆ ನಮ್ಮೆ ಹಿರಿಯರು ಹೇಳಿದ್ದಾರೆ  ಸಾವಿರ ಸುಳ್ಳು ಹೇಳಿ 'ಮದುವೆ' ಮಾಡ ಬೇಕು ಅಂತ ; ಹಾಗಂದ್ರೆ ಸಾವಿರ ಸುಳ್ಳು ಹೇಳಿ ಅಂತಲ್ಲ ! ಒಂದು ಶುಭ ಕಾರ್ಯಕ್ಕೆ ಸುಳ್ಳು ಹೇಳಿದರೆ ಅಡ್ಡಿ ಇಲ್ಲ ಅಲ್ವೇ?
೭) ಇನ್ನು ಹುಟ್ಟು ಸುಳ್ಳು ಅಂದ್ರೆ ; ಕೆಲವರು ಹುಟ್ಟಿನಿಂದ ಸುಳ್ಳು ಹೇಳೋ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ ; ಅದೇ 'ಹುಟ್ಟು ಸುಳ್ಳು'

ಹಾಗೆ ಬರೆಯುತ್ತಾ ಹೋದರೆ ನಾನು ಕೂಡ ಸುಳ್ಳಿನ 'ಸರ ಮಾಲೆ' ಪೋಣಿಸಬೇಕಾಗುತ್ತೋ ಏನೋಪ್ಪ ! ಸುಳ್ಳಿನ ಇನ್ನೊಂದು ಅನಾನುಕೂಲತೆ. ಎಂದರೆ ನೀವು ಹೇಳಿದ ಸುಳ್ಳನ್ನ ನೆನಪಿಟ್ಟುಕೊಳ್ಳಬೇಕಾಗುವುದು.. ಬೇಡ ಬೇಡಾ ನನಗೆ ತುಂಬಾ ಮರೆವು ಸ್ವಾಮಿ !! ಸಧ್ಯಕ್ಕೆ ಇಲ್ಲಿಗೆ ನನ್ನ 'ಸುಳ್ಳಿನ ಪುರಾಣ ' ಕ್ಕೆ ಇತಿಶ್ರೀ ಹಾಡುತ್ತೇನೆ.  ಜೈ ಪುಂಡರೀಕ ವರದೇ ...............

Thursday 11 December 2014







''ನೀರಿನ ಬವಣೆ ''

 

ಎಲ್ಲೋ ಹುಡುಕಿದೆ ಇಲ್ಲದ ನೀರನು ಇಂಗಿ ಹೋಗಿಹ ಈ ಕೊಳದೊಳಗೆ
ಖಾಲಿ ಕೊಡವನು ಮನೆಗೆ ಕೊಂಡೊಯ್ದರೆ ಅತ್ತೆ ಬೈಯುವಳು ಮನೆಯೊಳಗೇ ::

ನೀರು ಓ ನೀರು ; ಓ ಮಳೆ ನೀರಾದರೂ ಬಂದು ತುಂಬ ಬಾರದೆ ಈ ಕೊಡವ
ಖಾಲಿ ಕೊಡವನು ಮನೆಗೆ ಕೊಂಡೊಯ್ದರೆ ಹೇಗೆ ಎದುರಿಸಲಿ ಗಂಡನ ಕೋಪವ ::

ಅಪ್ಪ-ಅಮ್ಮನ ಹೆಗಲ ಮೇಲಿನ ಹೊರೆ ಇಳಿಸಲು ನಾ ಯಾಕೆ ಒಪ್ಪಿದೆ ಹಳ್ಳಿಯ ಗಂಡನ
ಒಪ್ಪಿ ಕೊಂಡ ತಪ್ಪಿಗೆ ಅನುಭವಿಸಲೇ ಬೇಕು ನೀರಿಗೆ ಕೊರತೆ ಇರೋ ಈ ಹಳ್ಳಿಯನ ::

ಎನ ಮಾಡಲಿ ಓ ದೇವರೇ ಗಾವುದ ನಡೆದರೂ ನೀರೆ ಕಾಣುತಿಲ್ಲವಲ್ಲ
ಓ ಗಂಗೆ ನೀನ್ಯಾಕೆ ಶಿವನ ಮುಡಿಯಿಂದ ಧರೆಗಿಳಿದು ಬರುತ್ತಿಲ್ಲವಲ್ಲ ::

ಗಾವುದ ನಡೆದು ಬಾಯಾರಿಕೆ ತಣಿಸಲು ಒಂದು ಬೊಗಸೆ ನೀರು ಸಿಕ್ಕರೂ ಸಾಕು
ಆ ಬೊಗಸೆ ನೀರೆ ಅಮೃತವಾಗಿ ನನ್ನಯ ದಣಿವನು ತಣಿಸಲು ಬೇಕೂ ::

ನೀರಿನ ಬವಣೆ ತಪ್ಪಿಸಲೋಸುಗ ನಾನೇ ಊರಿನ '' ಕೆರೆಗೆ ಹಾರವಾಗಿ '' ಸತ್ತರೂ ಸರಿಯೇ
ಓ ಮಳೆರಾಯ ನಿನಗೆ ಬಾರದೆ ಕರುಣೆ , ನನ್ನಯ ಪ್ರಾಣವ ಪಣವಿಟ್ಟರೂ ಸರಿಯೇ ??

Wednesday 10 December 2014





'' ಮುದ್ದಿನ ಲೇಖನಿ'

ನನಗೇಕೋ ನನ್ನ ಲೇಖನಿಯ ಮೇಲೆ ಇನ್ನಿಲ್ಲದ ಸಿಟ್ಟು 
ಅದೆಲ್ಲಿ ಅವಿತು ಕುಳಿತು ಕೊಂಡಿರುತ್ತದೆಯೋ ತಲೆಕೆಟ್ಟು 
ನನ್ನಲ್ಲಿ ಭಾವನೆಗಳು ಮೂಡಿ ಹೊರ ಬಂದು 
ಇನ್ನೇನು  ಕಾಗದದ ಮೇಲೆ ಬರೆಯ ಬೇಕೆಂದು 
ಹಪ ಹಪಿಸುವಷ್ಟರಲ್ಲೇ ನನ್ನ ಲೇಖನಿಯ ಹುಡುಕಾಟ ಶುರು ::

ಅರೆ ಓ ಲೇಖನಿಯೆ ನಿನಗೇಕೆ ನನ್ನಲಿ ಮುನಿಸು
ಬೇಗ ನನ್ನ ಕಣ್ಣಿಗೆ ಕಾಣಬಾರದೆ ನೀ ತುಸು 
ನೀನು ತಡ ಮಾಡಿದಷ್ಟು ಈ 'ಮರೆವು' ಎಂಬ ಆಕ್ಟೋಪಸ್ 
ನನ್ನ ತಲೆಯಲ್ಲಿ ಕುಳಿತು 'ಪದ ಪುಂಜಗಳ' ಕೂಗುತ್ತೆ ಕೋರಸ್  
ಆಗ ನೋಡಬೇಕು ನನ್ನ ಪರಿಸ್ತಿತಿ ಟುಸ್ ಟುಸ್ ಟುಸ್  ::

ನನ್ನ ಮುದ್ದು ಲೇಖನಿಯೇ ನಾ ಮಾಡಲಾರೆ ನಿನಗೆ ನೋವು  
ನಿನ್ನನ್ನು ಅತಿ ನವಿರಾಗಿ ಸವರಿ; ಮೃದುವಾಗಿ  ಬಳಸುವೆ 
ನಿನ್ನನ್ನು ಜೋಪಾನ ಮಾಡಿದರೆ ತಾನೇ ನಿನಗೆ ನನ್ನಲಿ ಒಲವು 
ಭಯ ಪಡದಿರು ಓ ಲೇಖನಿ ನನಗೂ ನಿನ್ನಲಿ ಒಲವು 
ಹಾಗಾಗಿ   ನನ್ನ ಕವನಗಳ ರೂವಾರಿಯೇ ನೀನಲ್ಲವೇ ::

Tuesday 9 December 2014



'ಗೋಮಾತೆ'


ಹೇ 'ಗೋಮಾತೆ' ನೀನಷ್ಟು ಒಳ್ಳೆಯವಳು ;
ನೀ ನೀಡುವ ಹಾಲು ಮಕ್ಕಳಿಂದ ವೃದ್ಧರಾದಿಯಾಗಿ ;
ರೋಗಿಗಳಿಗೆ, ಬೆಕ್ಕಿನ ಮರಿಗಳಿಗೆ, ನಾಯಿ ಮರಿಗಳಿಗೆ
ಹೀಗೆ ಪ್ರತಿಯೊಬ್ಬರಿಗೂ ಮುಖ್ಯ ಆಹಾರ
'ಗೃಹ ಪ್ರವೇಶ' ದ ದಿನವಂತೂ ನಿನಗೆ ಪ್ರಥಮ ಸ್ಥಾನ
ನಿನ್ನ ಪೂಜೆಯ ನಂತರವೇ ನಮ್ಮ 'ಗೃಹ ಪ್ರವೇಶ'
ಪ್ರತಿ ಶುಕ್ರವಾರ ಹಾಗೂ ಮಂಗಳವಾರ 'ಗೋ ಪೂಜೆ' ಮಾಡಿದರೆ
ಮುಕ್ಕೋಟಿ ದೇವರ ಪೂಜೆ ಮಾಡಿದಷ್ಟೇ ಪುಣ್ಯ ಎನ್ನುತಿದ್ದಳು ನನ್ನಮ್ಮ
ಅದನ್ನೇ ಪಾಲಿಸುತ್ತಿದ್ದೇನೆ ನಾನು; ನೀ ನಮ್ಮ ಮನೆ ಬಾಗಿಲಿಗೆ ಬಂದು
ಪ್ರತಿ ಶುಕ್ರವಾರ ನನ್ನ ಆತಿಥ್ಯವನ್ನು ಸ್ವೀಕರಿಸಿ ನಮ್ಮನ್ನು ಅಶಿರ್ವರ್ಧಿಸಿ
ನನ್ನ ಪೂಜೆಗೆ ಭಂಗ ತಾರದೆ ಪಾದಗಳಿಗೆ ಅರಿಶಿನ-ಕುಂಕುಮ ಹಚ್ಚುವಾಗ
ನಿನ್ನ ಸುಂದರವಾದ ಕೊಂಬುಗಳಿಗೆ ಹೂ ಇಡುವಾಗ ತಾಳ್ಮೆ ಇಂದ ಇದ್ದು ,
ಸಹಕರಿಸಿದ್ದಕ್ಕೆ ಇದೋ ನಿನಗೆ ಕೋಟಿ ಕೋಟಿ ಪ್ರಣಾಮಗಳು

Sunday 7 December 2014





''ಹಿತ ನುಡಿಗಳು ''


ಪುಟ್ಟ ವಯಸ್ಸಿನಲ್ಲೇ ಕೆಟ್ಟ ಗುಣಗಳ ದೂರ ಮಾಡು
ಕಲಿಯುವ ವಯಸ್ಸಿನಲ್ಲಿ ಒಳ್ಳೆ ಜ್ಞಾನಾರ್ಜನೆ ಮಾಡು
ಯಾವಾಗಲು ಗುರು ಹಿರಿಯರಿಗೆ ವಿಧೇಯ ನಾಗಿರು
ದೀನ ದಲಿತರಿಗೆ ; ವಿಕಲಾಂಗರಿಗೆ ಸಹಾಯ ಹಸ್ತ ಚಾಚು
ದುಷ್ಟರಿಂದ ದೂರವಿರು, ಶಿಷ್ಟರ ಸಂಗ ತೊರೆಯದಿರು
ಅತ್ಯಾಚಾರ, ಅನಾಚಾರ ಮಾಡದೇ ಸದಾಚಾರಿಯಾಗಿರು
ಪ್ರಾಣಿ, ಪಕ್ಷಿಗಳನ್ನು , ಪ್ರಕೃತಿಯನ್ನು ಸದಾ ಪ್ರೀತಿಸು
'ಕಾಯಕವೇ ಕೈಲಾಸ' ಎಂಬುದನ್ನು ಮರೆಯದಿರು
ಕಷ್ಟ ಪಟ್ಟರೆ ಸುಖವುಂಟು ಎಂಬ ನಾಣ್ನುಡಿ ದಾರಿದೀಪವಾಗಿರಲಿ
ದೇವರನ್ನು ನಂಬು, ಸತ್ಯ-ಧರ್ಮದ ಹಾದಿಯಲ್ಲಿ ನಡೆ
ಸತ್ಯವೇ ದೇವರು, ಧರ್ಮವೇ ದೇವರು
ಒಲವೆ ಜೀವನ ಸಾಕ್ಷಾತ್ಕಾರ
ಜೀವನವ ಸುಖಿಸು, ಪರಿಪೂರ್ಣ ಮಾನವನಾಗು

Tuesday 2 December 2014






'ತೃಪ್ತಿ '

ನಂದದ ಜ್ಯೋತಿಯ ಬೆಳಗಿ
ಪ್ರೀತಿಯ ಹಂಚೋಣ ತೊಡಗಿ
ಮನೆ ಮನೆಯಲ್ಲೂ ಆರದ ಜ್ಯೋತಿ
ಮನೆ ಮನೆಯಲ್ಲೂ ಕುಂದದ ಪ್ರೀತಿ:

ನಗಿಸಿ ನಲಿಯೋಣ
ಖುಷಿಸಿ ಸುಖಿಸೋಣ
ಹಿರಿಯರ ಸೇವೆ ಮಾಡೋಣ
ಕಿರಿಯರಿಗೆ ಮಾರ್ಗ ತೋರೋಣ:

ನೋಡಿದೆ ಈ ಲೋಕದ ನೋವ
ನೋಡಿದೆ ಈ ಲೋಕದ ನಲಿವಾ
ಇನ್ನೇನು ಬೇಕಿದೆ ಓ ಜೀವವೇ
ಇನ್ನಾದರೂ ಸಿಗಲಿ ಸಾವು ಅಲ್ಲವೇ ??

Wednesday 19 November 2014






ನಗು :)


ನಗುವೇ ಬದುಕಿನ ಜೀವಾಳ
ನಗುವೇ ಜೀವನದ ಆಧಾರ
ನಗುವಿಲ್ಲದ ಕಳೆಗುಂದಿದ ಮೊಗ
ಆರೋಗ್ಯವ ಹದಗೆಡಿಸಿ ರೋಗ
ಮತ್ಯಾಕೆ ಚಿಂತೆ ?
ರೋಗ ರುಜಿನ ದೂರಗೊಳಿಸಿ
ನಕ್ಕು ಬಿಡಿ ವ್ರುದ್ದಿಸಿ ಆಯುಷ್ಯವ
ನೂರ್ಕಾಲ ಸುಖದ ಬದುಕ ಬಾಳಿ
ಮಾದರಿಯಾಗಲಿ ಎಲ್ಲರಿಗೂ
ನಮ್ಮಯ ಸುಖಮಯ ಬದುಕು
ಚಿಂತ್ಯಾಕೆ ಮಾಡುತಿ ಚಿನ್ಮಯನಿದ್ದಾನೆ !

Wednesday 12 November 2014


''ಹೆಮ್ಮರದ ಬಯಕೆ''



ಅಯ್ಯೋ ನಾನು ನಾಳೆ ಬಿದ್ದು ಹೋಗುವ ಮರ
ಹಣ್ಣಾದ ಎಲೆಗಳನ್ನು ನೋಡಿ ಬೇಸತ್ತು ಹೋಗಿದೆ
ಹಸಿರು ಇದ್ದರೆ ಅಷ್ಟೇ ಮರ ನೋಡಲು ಚೆಂದ
ಎಂದು ನನ್ನ ಮುಂದೆ  ಹಾದು ಹೋಗುವವರೆಲ್ಲ
ಹೇಳಿ ಹೇಳಿ ನನಗೆ ಜೀವನದಿ ಜಿಗುಪ್ಸೆಯಾಗಿದೆ  !!!

ಈ ಹಣ್ಣಾಗಿ ಉದುರಿದ ಎಲೆಗಳಿಗೆ ಜೀವವೆಲ್ಲಿ ಇನ್ನು ?
ಆ ನಂತರ ನನ್ನ ಬೇರುಗಳೆಲ್ಲ ಮಣ್ಣಿನಿಂದ ಸಡಿಲಗೊಂಡು
ನನ್ನ ರೆಂಬೆ ಕೊಂಬೇಗಳೆಲ್ಲ ಒಣಗಿ ಹೋಗುತ್ತವೆ
ಕಟ್ಟಿಗೆ ಒಡೆಯುವವ ನನ್ನ ದೇಹಕ್ಕೆ 'ಮುಕ್ತಿ' ಕೊಡುತ್ತಾನೆ

ನಂತರ ನನ್ನನ್ನು ಒಲೆ ಉರಿಸಲು  ಬಳಸಿ ಕೊಳ್ಳುತ್ತಾರೆ
ನನ್ನಿಂದ ವಿಧ ವಿಧವಾದ ಅಡುಗೆ ತಿನಿಸುಗಳನ್ನು ಮಾಡುತ್ತಾರೆ
'ದಯಾ ಮರಣ' ಪಾಲಿಸೆಂದು ಬೇಡಿಕೊಂಡೆ ಆ ದೇವರ
ಅಷ್ಟರಲ್ಲೇ ಮರ ಕಡಿದು ನನ್ನ ದೇಹಕ್ಕೆ ಮುಕ್ತಿ ಕೊಟ್ಟವರ
ನನ್ನ 'ಕೊನೆಯಾಸೆಯಂತೆ'  ನನ್ನ 'ಅಂತ್ಯ ಸಂಸ್ಕಾರ' ಮಾಡಿದವರ
                     ಆ ಭಗವಂತ ನೂರು ವರುಷ
                                                                                                   ಆಯುರಾರೋಗ್ಯ ಕೊಟ್ಟು ಕಾಪಾಡಲಿ



 << ಉಮಾ ಪ್ರಕಾಶ್ >>


ದೇವರು ಮೆಚ್ಚನಂತೆ !!!


ನೋಡಿಯೂ ನೋಡದಂತೆ
ಕೇಳಿಯೂ ಕೇಳಿಸದಂತೆ
ಕಂಡರೂ ಕಾಣಿಸದಂತೆ
ಇರುವವರ ದೇವರು ಮೆಚ್ಚನಂತೆ :

ಇಷ್ಟವಾದರೂ ಇಷ್ಟವಾಗದಂತೆ
ಕಷ್ಟವಾದರೂ ಕಷ್ಟವಾಗದಂತೆ
ಸುಖವಿದ್ದರೂ ಸುಖವಿಲ್ಲದಂತೆ
ನಟಿಸುವವರ ದೇವರು ಮೆಚ್ಚನಂತೆ :

ಗುರಿಇಲ್ಲದಿದ್ದರೂ ಗುರಿ ಇದ್ದಂತೆ
ಅರಿವಿಲ್ಲದಿದ್ದರೂ  ಅರಿವಿದ್ದಂತೆ
ಮನಸಿಲ್ಲದಿದ್ದರೂ ಮನಸಿದ್ದಂತೆ 
ಇರುವವರ ದೇವರು ಮೆಚ್ಚನಂತೆ :

ಭಕುತಿ ಇಲ್ಲದಿದ್ದರೂ ಭಕುತಿ ಇದ್ದಂತೆ
ಭಾವವಿಲ್ಲದಿದ್ದರೂ ಭಾವವಿದ್ದಂತೆ
ಶಕ್ತಿ ಇಲ್ಲದಿದ್ದರೂ ಶಕ್ತಿ ಇದ್ದಂತೆ
ನಟಿಸುವವರ ದೇವರು ಮೆಚ್ಚನಂತೆ :

Monday 5 May 2014




ಇದುವೇ ಜೀವ ; ಇದು ಜೀವನ !!!!



ಗುಡಿ ಗೋಪುರ ಒಂದನ್ನೊಂದು ಬಿಟ್ಟಿರಲಾರವು ;
ದೇವರು ಭಕ್ತರು ಒಬ್ಬರನ್ನೊಬ್ಬರು ಬಿಟ್ಟಿರಲಾರರು ;
ಹೂವು ಪರಿಮಳ ಒಂದನ್ನೊಂದು ಬಿಟ್ಟಿರಲಾರವು ;
ವೀಳೆದೆಲೆ ಅಡಿಕೆ ಒಂದನ್ನೊಂದು ಬಿಟ್ಟಿರಲಾರವು ;
ಕಣ್ಣು ರೆಪ್ಪೆ ಒಂದನ್ನೊಂದು ಬಿಟ್ಟಿರಲಾರವು ;
ಹೃದಯ ಬಡಿತ ಒಂದನ್ನೊಂದು ಬಿಟ್ಟಿರಲಾರವು ;
ಕಾಲು ನಡಿಗೆ ಒಂದನ್ನೊಂದು ಬಿಟ್ಟಿರಲಾರವು ;
ಕೈ ಬಾಯಿ ಒಂದನ್ನೊಂದು ಬಿಟ್ಟಿರಲಾರವು ;
ತಾಯಿ ಮಗು - ಹಸು ಕರು ಒಂದನ್ನೊಂದು ಬಿಟ್ಟಿರಲಾರವು ;
ಇದುವೇ ಜೀವ ; ಇದು ಜೀವನ !!!!



ತೋರಿಕೆ !!!!

ಹುಟ್ಟಿದ ಮಕ್ಕಳ್ಳೆಲ್ಲ ಆರೋಗ್ಯವಂತರಾಗಿರೋಲ್ಲ
ಆರೋಗ್ಯವಂತರಿಗೆಲ್ಲ ಪೂರ್ಣ ಆಯಸ್ಸು ಇರೋಲ್ಲ !!
ವೇದಾಂತ ಹೇಳೋರೆಲ್ಲ ವೇದಾಂತಿಗಳಲ್ಲ
ಬುದ್ದಿ ಹೇಳೋರೆಲ್ಲ ಬುದ್ದಿವಂತರಾಗಿರೋಲ್ಲ !!!
ಬೆಳ್ಳಗಿರೋದೆಲ್ಲ ಹಾಲಲ್ಲ ; ಕಹಿ ಎಲ್ಲ ವಿಷವಲ್ಲ
ಕಾಡಿನಲ್ಲಿರೋ ಮರಗಳೆಲ್ಲಾ ಶ್ರೀಗಂಧ ವಾಗಿರೋಲ್ಲ
ಕಲ್ಲಿನ ನಾಗನಿಗೆ ಹಾಲೆರೆಯೋದಲ್ಲ;
ನಿಜವಾದ ಹಾವನ್ನು ಕೊಂದು ಹಾಕೊದಲ್ಲ !!!
ಹಸಿದ ಭಿಕ್ಷುಕನಿಗೆ ಬಡಿಸದೆ ; ಹೊಟ್ಟೆ ತುಂಬಿದವನಿಗೆ ಬಡಿಸೋದಲ್ಲ !!
ತನ್ನ ಮಗುವನ್ನು ಕೆಲಸದವಳ ಕೈಗೆ ಒಪ್ಪಿಸಿ
ತಾನು ನೂರಾರು ಮಕ್ಕಳನ್ನು ನೋಡಿ ಕೊಳ್ಲೋದಲ್ಲ !!!
ತಮ್ಮ ತಟ್ಟೆಯಲ್ಲಿ ಜಿರಳೆ ಬಿದ್ದಿದರೂ
ಬೇರೆಯವರ ತಟ್ಟೆಯಲ್ಲಿ ಇರುವೆ ಹುಡುಕೋದಲ್ಲ !!!

Tuesday 25 March 2014








ಜನ ಸಂಖ್ಯಾ ಸ್ಪೋಟ





ಒಟ್ಟು ಕುಟುಂಬದಲ್ಲಿ  ಮನೆ ತುಂಬಾ ಹಿರಿಯರು , ಕಿರಿಯರು
''ಮಕ್ಕಳಿರಲವ್ವ ಮನೆ ತುಂಬಾ '' ಎಂದರು ಹಿರಿಯರು
ಆದರೆ ಜಾರಿ ಬಂದಿದ್ದು ''ಒಂದು ಬೇಕು ; ಎರಡು ಸಾಕು''
ಅದರೂ ಜನ ಸಂಖ್ಯಾ ಸ್ಪೋಟಕ್ಕೆ  ಈ ಭೂಮಿ ತತ್ತರಿಸಿದೆ

ಜನನ ನಿಯಂತ್ರಣ ಮಾಡುತ್ತಿದೆ ಸರ್ಕಾರ  ;
ಆದರೂ ಜನ ಸಂಖ್ಯೆ ದಿನದಿಂದ ದಿನಕ್ಕೆ ಏರಿ
ದಿನೋಪಯೋಗಿ ವಸ್ತುಗಳ ಬೆಲೆ ಏರಿ
ಮದ್ಯಮ ವರ್ಗದವರಿಗೆ ಈ ಜೀವನ
ಬೇಡಪ್ಪಾ  ಬೇಡ ಎನಿಸುತ್ತಿದೆ !!!!

Friday 21 March 2014




ರಕ್ತದ ಬಣ್ಣ ಒಂದೇ !!!!!




ಎಲ್ಲರಲ್ಲೂ ಹರಿತಿರೋದು ಒಂದೇ ಬಣ್ಣದ ರಕ್ತ ; 
ಆದರೂ ಏಕೆ ಕೆಲವರು ಬೇರೆ ಬೇರೆ ಬಣ್ಣ ತೋರಿಸಿ ಮನುಷ್ಯತ್ವ ಮರೆತು ರಾಕ್ಷಸತ್ವ ಮೆರಿತ್ತಿದ್ದಾರೆ ???? 
ಯಾತಕ್ಕಾಗಿ ಈ ಕೊಲೆ, ಸುಲಿಗೆ, ಕಚ್ಚಾಟ , ಕಾದಾಟ, ದರೋಡೆ, ಮೋಸ, ವಂಚನೆ, ಅನ್ಯಾಯ ಇವೆಲ್ಲ ?? 
ದೈವತ್ವ ಮೆರೆದು ಎಲ್ಲರೂ ದೇವರಾಗಬೇಕಿಲ್ಲಾ !!!! 
ಆದರೆ ಮನುಷ್ಯನಾಗಿ ಹುಟ್ಟಿದ್ದಕ್ಕೆ ಒಳ್ಳೆ ಮನುಷ್ಯರಾಗಿ 
ಯಾರಿಗೂ ತೊಂದರೆ ಕೊಡದಿದ್ದರೆ ಅಂತಹವರೂ ಕೂಡ 'ಸ್ವರ್ಗ' ಸೇರಬಹುದು ; '
'ನರಕ' ವೆಂಬುದೆ ಇರುವುದಿಲ್ಲ ಅಲ್ಲವೇ ???
ಸ್ವರ್ಗವನ್ನು ನಾವೇ ಸೃಷ್ಟಿಸಬಹುದು ಹಾಗೆ ನರಕ ಕೂಡ 
ಏನಾದರು ಆಗು ಮೊದಲು ಒಳ್ಳೆ ಮಾನವನಾಗು 


 ಉಮಾ ಪ್ರಕಾಶ್ 










''ಗಂಡಿಗೊಂದು ಹೆಣ್ಣು ಸೃಷ್ಟಿ ನಿಯಮ ''


''ಅಷ್ಟ ವರ್ಷ ಭವೇತ್ ಕನ್ಯಾ '' ಎಂದು ಹಿಂದೆ ಹಿರಿಯರು ಮಾಡಿದ್ದರು. ಹಾಗಾಗಿ ಹೆಚ್ಚಾಗಿ ಬಾಲ್ಯ ವಿವಾಹಗಳು ಜಾರಿಯಲ್ಲಿತ್ತು. ಆದರಿಂದು ಸರ್ಕಾರ ಹೆಣ್ಣಿಗೆ ೧೮ ಮತ್ತು ಗಂಡಿಗೆ ೨೧ ವಯಸ್ಸು ಮದುವೆಗೆ ಯೋಗ್ಯ ಎಂದು ಕಾನೂನು ಮಾಡಿದೆ, ಅದನ್ನು ಉಲ್ಲಂಘಿಸಿದರೆ ಆ ಮದುವೆಯನ್ನು ತಡೆಯುವ ಹಕ್ಕು ಸಹ ಕಾನೂನಿಗಿದೆ. ಯಾಕೆಂದರೆ ಈಗ ಹೆಣ್ಣು ಮಕ್ಕಳು 'ಅಡುಗೆ ಮನೆ' ಗಷ್ಟೇ ಮೀಸಲಲ್ಲ. ಅವರೂ ಕೂಡ ಹೆಚ್ಚಿನ ವಿದ್ಯಾಹರ್ತೆ ಹೊಂದಿ , ಎಲ್ಲ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. ಹಿಂದಿನ ಕಾಲದ ಹೆಣ್ಣು ಮಕ್ಕಳಂತೆ ತಂದೆ-ತಾಯಿ ಒಪ್ಪಿದ (ತನ್ನ ಒಪ್ಪಿಗೆ ಕೇಳದಿದ್ದರೂ) ವರನನ್ನೇ ಮದುವೆಯಾಗಿ ''ಅನಿವಾರ್ಯತೆ '' ಗೆ ಒಳಗಾಗಿ ಜೀವನ ಸಾಗಿಸುತ್ತಿದರು. ಆದರೀಗ ಹೆಣ್ಣು ಮಕ್ಕಳು ತಮಗೆ ಇಷ್ಟವಾಗುವ ವರನನ್ನು ತಾವೇ ಆಯ್ಕೆ ಕೂಡ ಮಾಡಿ ಕೊಳ್ಳುತ್ತಾರೆ, ಮತ್ತೆ ಕೆಲವರು ತಮ್ಮ ಪೋಷಕರಿಗೆ ತಮಗೆ ಡಾಕ್ಟರ, ಇಂಜಿನಿಯರ್, ಪ್ರೊಫೆಸರ್, ವಿದೇಶಿ ಗಂಡು ಬೇಕೆಂದು ತಾಕೀತು ಮಾಡುತ್ತಾರೆ. ಆದರೆ ವಿಪರ್ಯಾಸ ಎಂದರೆ ಇಂದು ಗಂಡಿಗೆ ೩೦ ಆದರೂ ಹೆಣ್ಣು ಸಿಗುತ್ತಿಲ್ಲ ಎಂಬ ಮಾತು ಹಲವೆಡೆ ಕೇಳಿ ಬರುತ್ತಿದೆ. ಹಾಗಾಗಿ ಈ ಮೇಲೆ ಹೇಳಿದವರನ್ನು ಹೊರತು ಪಡಿಸಿ , ಉಳಿದ ಗಂಡುಗಳಿಗೆ ಹೆಣ್ಣು ಸಿಗದಂತಾಗಿದೆ. ಆದರೂ ಸಹ ಒಂದು ಗಂಡಿಗೆ ಒಂದು ಹೆಣ್ಣು ಬ್ರಹ್ಮ ಸೃಷ್ಟಿಸಿಯೇ ಇರುತ್ತಾನೆ ::